ಭಟ್ಕಳ : ಕನ್ನಡಿಗರೆಲ್ಲ ಒಂದಾಗಿ ನಿಂತರೆ ಏನನ್ನೂ ಸಾಧಿಸಬಲ್ಲರು ಎಂಬುದನ್ನು ತೋರಿಸಿರುವುದು ಕನ್ನಡ ನಾಡಿನ ಏಕೀಕರಣ ಹೋರಾಟ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಧ್ಯಕ್ಷ ಗಂಗಾಧರ ನಾಯ್ಕ ನುಡಿದರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ, ಎನ್ ಎಸ್ ಎಸ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಭಟ್ಕಳ ಇದರ ಸಹಯೋಗದೊಂದಿಗೆ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಪ್ರಯುಕ್ತದ ಉಪನ್ಯಾಸ ಹಾಗೂ ಸ್ವರಚಿತ ಕವನ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನುಡಿ, ಸಾಹಿತ್ಯ ಹಾಗೂ ಏಕಿಕೃತ ಕರ್ನಾಟಕದ ಹಿಂದಿನ ಹೋರಾಟ ಅಸಾಮಾನ್ಯವಾದುದು. ಈ ಹೋರಾಟಕ್ಕೆ ನೂರು ವರ್ಷಗಳ ಇತಿಹಾಸವಿದ್ದು ಹಲವು ಹೋರಾಟಗಾರರ ಪ್ರತಿಫಲವಾಗಿ ಅಖಂಡ ಕರ್ನಾಟಕದ ನಿರ್ಮಾಣ ಸಾಧ್ಯವಾಗಿದೆ.ಕನ್ನಡ ನಾಡಿನ ಏಕೀಕರಣದ ಹೋರಾಟವು ಸ್ವಾತಂತ್ರ್ಯ ಹೋರಾಟದಷ್ಟೇ ಪ್ರಮುಖ ಹಾಗೂ ಪ್ರಖರ ವಾದ ಹೋರಾಟ. ಯಾವುದೇ ಸಂಪರ್ಕ ಸಾಧನಗಳಿಲ್ಲದ ಕಾಲದಲ್ಲಿ ಏಕೀಕರಣ ಹೋರಾಟವನ್ನು ಒಂದು ಜನಾಂದೋಲನವಾಗಿ ರೂಪಿಸಿದ್ದೇ ಒಂದು ಇತಿಹಾಸ. ಈ ನಾಡಿನ ಭವ್ಯ ಪರಂಪರೆ ಇತಿಹಾಸವನ್ನು ಅರಿತು ಭವಿಷ್ಯವನ್ನು ಕಟ್ಟಬೇಕಿದೆ ಎಂದು ಏಕೀಕರಣದ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ಕನ್ನಡಿಗರು ಸ್ವಾಭಿಮಾನಿಗಳು ಹಾಗೂ ಸೌಮ್ಯ ಸ್ವಭಾವದವರಾಗಿದ್ದು ಪ್ರತಿಯೊಬ್ಬರನ್ನು ಪ್ರೀತಿಸುವ ಗುಣ ಉಳ್ಳವರಾಗಿದ್ದಾರೆ ಕನ್ನಡ ಸಾಹಿತ್ಯ ಸಮೃದ್ಧವಾಗಿದ್ದು ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ ಬಂದಿರುವುದು, ಇಲ್ಲಿನ ಕಲೆ ವಾಸ್ತುಶಿಲ್ಪ, ಸಾಹಿತ್ಯ ಕನ್ನಡದ ಹಿರಿಮೆಯನ್ನು ತೋರಿಸುತ್ತದೆ.ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾoಶುಪಾಲ ನಾಗೇಶ್ ಶೆಟ್ಟಿ ಮಾತನಾಡಿ ಸಾಹಿತ್ಯ ಸಮಾಜದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ ಸಾಹಿತ್ಯವು ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಸಮಾಜವನ್ನು ರೂಪಿಸುವಲ್ಲಿ ಮತ್ತು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಹಿತ್ಯ ನಮ್ಮನ್ನು ಸಂಸ್ಕರಿಸುವ ಕಾರ್ಯವನ್ನು ಮಾಡುತ್ತದೆ. ವಿದ್ಯಾರ್ಥಿಗಳು ಹೆಚ್ಚು ಸಾಹಿತ್ಯವನ್ನು ಓದುವ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಧನರಾಜ ಎನ್ ಎ ಮುಖ್ಯಸ್ಥರು ಪ್ರಾಸ್ತಾವಿಕ ನುಡಿಗಳನ್ನಾಡಿದರು ಕಾಲೇಜಿನ ವಿದ್ಯಾರ್ಥಿಗಳು ಸ್ವ ರಚಿತ ಕವನಗಳನ್ನು ವಾಚಿಸಿದರು. ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಕುಮಾರಿ ತನುಜಾ ಸ್ವಾಗಟಿಸಿದರೆ ಕುಮಾರಿ ಅಕ್ಷತಾ ವಂದಿಸಿದರು. ಕುಮಾರಿ ದೀಪಿಕಾ ಪ್ರಾರ್ಥನೆಯನ್ನು ಕುಮಾರಿ ಪ್ರೀತಿ ನಾಡಗೀತೆಯನ್ನು ಹಾಡಿದರೆ ಕುಮಾರಿ ದಿವ್ಯ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

