ಭಟ್ಕಳ:ತಾಲ್ಲೂಕಿನ ಹೂತ್ಕಳದ ಸರ್ವರೋಗ ನಿವಾರಕ ಶಕ್ತಿಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ಧನ್ವಂತರಿ ವಿಷ್ಣುಮೂರ್ತಿ ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆತೆ ಲೋಕಕಲ್ಯಾಣಾರ್ಥವಾಗಿ ಪ್ರಥಮ ಏಕಾದಶಿಯ ದಿನವಾದ ಭಾನುವಾಎದಂದು ಶ್ರೀ ಧನ್ವಂತರಿ ವಿಷ್ಣುವಿಗೆ ಲಕ್ಷ ತುಳಸಿ ಅರ್ಚನೆ ನೆರವೇರಿತು.
ಈ ಪ್ರಯಕ್ತ ಬೆಳಿಗ್ಗೆ ವಿಘ್ನೇಶ್ವರ ದೇವರ ಸನ್ನಿಧಿಯಲ್ಲಿ ಅಭಿಷೇಕದೊಂದಿಗೆ ಸಹಸ್ರದೂರ್ವಾರ್ಚನೆ, ವಿಶೇಷ ಅಲಂಕಾರ ಪೂಜೆ ಹಾಗೂ ಧನ್ವಂತರಿಯಲ್ಲಿ ಶ್ರೀಸೂಕ್ತ, ಪುರುಷಸೂಕ್ತಾದಿ ವಿಶೇಷ ಅಭಿಷೇಕಗಳು, ಕಲ್ಪೋಕ್ತ ಸಹಸ್ರನಾಮ, ಲಕ್ಷ ತುಳಸಿ ಅರ್ಚನೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆದರೆ, ಉಪಸ್ಥಿತರಿರುವ ಭಕ್ತರಿಗೆ ಮಧ್ಯಾಹ್ನ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಭಟ್ಟ ಇವರ ನೇತೃತ್ವದಲ್ಲಿ ವೇ.ಮೂ. ಸುಬ್ರಾಯ ಭಟ್ಟ, ಶ್ರೀಧರ ಭಟ್ಟ, ಸತೀಶ ಭಟ್ಟ, ಗುರು ಊಪಾಧ್ಯಾಯ, ಯೋಗೇಶ ಹೆಬ್ಬಾರ, ನಾರಾಯಣ ಉಪಾಧ್ಯಾಯ, ಗಣಪಯ್ಯ ಹೆಗಡೆ, ಶಾಂಭವ ಉಪಾಧ್ಯಾಯ, ಮಹೇಶ ಉಪಾಧ್ಯಾಯ, ವಿನಾಯಕ ಉಪಾಧ್ಯಾಯ ಸೇರಿದಂತೆ ೫೦ಕ್ಕೂ ಅಧಿಕ ಪುರೋಹಿತರು ಲಕ್ಷ ತುಳಸಿ ಅರ್ಚನೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಹಿಳೆಯರು ವಿಷ್ಣು ಸಹಸ್ರನಾಮ ಓದಿದರು. ಭಾರೀ ಮಳೆಯ ಮಧ್ಯೆಯೂ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಸಂಜೆ ಶಿವಶಾಂತಿಕಾ ಕಲಾವರ್ಧಕ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಡೆದ ಶರಸೇತುಬಂಧ ಯಕ್ಷಗಾನ ತಾಳಮದ್ದಲೆ ಮನರಂಜಿಸಿತು.
ಹೂತ್ಕಳದ ಶ್ರೀ ಕ್ಷೇತ್ರ ಧನ್ವಂತರಿ ವಿಷ್ಣುಮೂರ್ತಿ ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ
RELATED ARTICLES
