*ಭಟ್ಕಳ:* ತಾಲೂಕಿನ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಕ್ಷಿಪ್ರಗತಿಯಲ್ಲಿ ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೋಲೀಸರು ಯಶಸ್ವಿಯಾಗಿದ್ದಾರೆ.
ಶಿರಾಲಿಯ ಅಮೀರ್ ಹಸನ್ ಬ್ಯಾರಿ (27 ವರ್ಷ), ಮುಗ್ಧ ಕಾಲೋನಿ ನಿವಾಸಿ ಮಹ್ಮದ ಇಮ್ರಾನ್ ಅಬ್ದುಲ್ ಗಫರ್ (24 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ. ಸೋಮವಾರ ರಾತ್ರಿ ದೇವಸ್ಥಾನಕ್ಕೆ ಬಂದ ಆರೋಪಿಗಳು ಸಿಸಿಟಿವಿ ಕ್ಯಾಮರಾಗಳಿಗೆ ಬಟ್ಟೆ ಹಾಗೂ ನೀರಿನ ಲೋಟ ಮುಚ್ಚಿ ಹುಂಡಿಯನ್ನು ಒಡೆದು ಅದರಲ್ಲಿದ್ದ ಕಾಣಿಕೆ ಹಣವನ್ನು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ತನಿಖಾ ಸಂದರ್ಭದಲ್ಲಿ ದೇವಸ್ಥಾನ ಹತ್ತಿರ ಚಪ್ಪಲಿ ಗುರುತು ಪತ್ತೆಯಾಗಿತ್ತು. ಸಂಬಂಧಪಟ್ಟಂತೆ ಕೆಲವೊಂದು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ತನಿಖೆ ಸಂದರ್ಭದಲ್ಲಿಯೇ ಆರೋಪಿಗಳು ನಾಪತ್ತೆಯಾಗಿದ್ದರು. ನಂತರ ಗ್ರಾಮೀಣ ಠಾಣೆಯ ಸಿ.ಪಿಐ ಮಂಜುನಾಥ ಲಿಂಗಾರೆಡ್ಡಿಯ ಚುರುಕು ಕಾರ್ಯಚರಣೆಯಿಂದಾಗಿ ಇಬ್ಬರು ಆರೋಪಿಗಳನ್ನು 24 ಗಂಟೆಯ ಒಳಗಾಗಿ ಪತ್ತೆ ಹಚ್ಚಿದ್ದಾರೆ. ಆರೋಪಿಗಳು ಕಳ್ಳತನ ಮಾಡಿದ್ದ ನಗದು ಸೇರಿ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನ ಸೇರಿ ಒಟ್ಟು1 ಲಕ್ಷದ 80 ಸಾವಿರ ಮೌಲ್ಯದ ಸ್ವತ್ತನ್ನು ವಶ ಪಡಿಸಿಕೊಂಡಿದ್ದಾರೆ.
ಬಂಧಿತರ ವಿಚಾರಣೆ ವೇಳೆ ಇವರ ವಿರುದ್ಧ ಶಿರಸಿಯ ಬನವಾಸಿಯಲ್ಲಿಯೂ ಇವರ ವಿರುದ್ಧ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ. ಗ್ರಾಮೀಣ ಠಾಣೆಯ ಪೊಲೀಸರ ಶೀಘ್ರ ಕಾರ್ಯಾಚರಣೆಗೆ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಎಫ್.ಕೆ ಮೊಗೇರ, ಆಡಳಿತ ಮಂಡಳಿಯ ಸದಸ್ಯರು ಮತ್ತು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಟ್ಕಳದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಸೇರಿದಂತೆ ಮೂರು ದೇವಸ್ಥಾನ ಕಳ್ಳತನ ಪ್ರಕರಣ ಸಂಬಂಧಿಸಿ ಪ್ರಕರಣ ಪತ್ತೆ ಹಚ್ಚುವಲ್ಲಿ ಗ್ರಾಮೀಣ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ.
ಶೇಡಬರಿ ಮತ್ತು ಅರೇಕಲ್ ಜಟಕಾ ಮಹಾಸತಿ ದೇವಸ್ಥಾನ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿದ ಭಟ್ಕಳದ ಗ್ರಾಮೀಣ ಠಾಣೆ ಪೋಲೀಸರು
RELATED ARTICLES
